"ಮುಸ್ಸಂಜೆಯ ಕಥಾ ಪ್ರಸಂಗ" ೧೯೭೮ರಲ್ಲಿ ಪ್ರಕಟವಾದ ಲೇಖಕ ಪಿ.ಲಂಕೇಶ್ ಅವರ ಕನ್ನಡ ಕಾದಂಬರಿಯಾಗಿದ್ದು, ೨೦೦೪ರವರೆಗೆ ನಾಲ್ಕು ಮರುಮುದ್ರಣ ಹೊಂದಿದೆ.. == ಕಥಾವಸ್ತು == ಮನುಷ್ಯ ಮನುಷ್ಯರ ನಡುವಿನ ವರ್ತನೆಗಳನ್ನು ಕಥಾ ರೂಪಕ್ಕೆ ತಂದು, ಆ ಕಥೆಗೆ ೫೦-೬೦ರ ದಶಕದ ಆಸುಪಾಸಿನ ಗ್ರಾಮೀಣ ಪರಿಸರವನ್ನು ಹೊದಿಸಿ, ಅಸತ್ಯ, ಅಪ್ರಾಮಾಣಿಕತೆ, ಅನೈತಿಕತೆಗಳನ್ನೆಲ್ಲ ಸಹಜವೆಂಬಂತೆ ಚಿತ್ರಿಸಿ, ಪಾತ್ರಗಳಿಗೆ ಜೀವಂತಿಕೆ ಇರುವುದೇ ಇವುಗಳಿಂದ ಎಂದು ಬಿಂಬಿಸಿ, ಕಥೆಯ ಸಾಗುವ ಗತಿಯನ್ನು ಓದುಗನು ತಪ್ಪಿಸಿಕೊಳ್ಳದಂತೆ ಆಗಾಗ ಲೇಖಕನು ಕಥೆಯೊಳಗೆ ಪ್ರವೇಶಿಸಿ, ಇದು ಹೀಗೆ ಎಂದು ನಿರ್ದೇಶಿಸುತ್ತ ಕಟ್ಟಿಕೊಟ್ಟಿರುವ ಕಾದಂಬರಿ "ಮುಸ್ಸಂಜೆಯ ಕಥಾ ಪ್ರಸಂಗ" ಈ ಕಥೆ ಕಂಬಳ್ಳಿ ಎಂಬ ಹಳ್ಳಿಯಲ್ಲಿ ನಡೆಯುತ್ತದೆ. ಆಣೆ ಬಡ್ಡಿ ರಂಗವ್ವ, ಅವಳ ಮಗಳು ಸಾವಂತ್ರಿ, ಸಾವಂತ್ರಿಯ ಪ್ರೇಯಸಿ ಬ್ಯಾಡರ ಮಂಜ, ಮೆಷಿನ್ ಭರಮಣ್ಣ, ಅವನ ಹೆಂಡತಿಯರಾದ ಸಾದ್ವಿ ರುದ್ರಿ, ಹರಾಮಿ ರಾಮಿ, ಪೈಲ್ವಾನ್ ಶಿವಾಜಿ, ೧೩-೧೪ ವಯಸ್ಸಿನ ‘ಬಾಲಕ’ ಕರಿಯ, ನೊಂದ ಪ್ರೇಮಿ ಶಿವನಂಜ, ಅವನು ಶಿವಮೊಗ್ಗದಿಂದ ಕರೆತರುವ ಸಾಹಿತ್ಯೋತ್ತಮ ಉಡುಪ, ಅವನ ಅಕ್ಕರೆಯ ಹೆಂಡತಿ ಮಮ್ತಾಜ್, ಮಕ್ಕಳು ಮಾಡಿದ ನೀಚ ಕೆಲಸಗಳಿಂದ ಹುಚ್ಚನೋ,ದಾರ್ಶನಿಕನೋ ಎಂಬ ಜಿಜ್ಞಾಸೆಗೆ ಗುರಿಯಾಗಿರುವ ಶ್ರೇಷ್ಠಿ, ಆಗಾಗ ಬಂದು ಒಳಿತು-ಕೆಡಕುಗಳನ್ನು ಹೇಳುವ ಅವನ ಗೆಳೆಯ ಶಾಸ್ತ್ರಿ, ಎಲ್ಲದರಲ್ಲೂ ಲಾಭ ಮಾಡಿಕೊಳ್ಳುಲು ನೋಡುವ ರಾಚ, ರಾಚನಂತೆ ಇದ್ದರೂ ಜಾಣೆಡ್ಡ ಬೂಸಿ ಬಸ್ಯ, ಕುಳ್ಳನೆಯ ಕಳ್ಳಬುದ್ಧಿಯ ಮೇಷ್ಟ್ರು ಸಣ್ಣೀರಪ್ಪ, ಊರಿನ ಉಸಾಬರಿಯಿಂದ ದೂರವಿರುವ,ಊರವರ ಅವಗಣನೆಗೆ ಒಳಗಾಗಿರುವ ನಂದ್ಯಪ್ಪ ಮತ್ತು ಅವನ ಕುಟುಂಬ, ಕುಟುಂಬಕ್ಕೆ ಹೊರೆಯಾಗಬಾರದೆಂದು ಬದುಕಲು ಹೋಗಿ ಸಾಯುವ ಶಿವಿ, ವಿಚಿತ್ರ ಪ್ರೇಮಿ ಇಕ್ಬಾಲ್ ಮುಂತಾದ ಪಾತ್ರಗಳ ಸುತ್ತ ಈ ಕಾದಂಬರಿಯನ್ನು ರಚಿಸಲಾಗಿದೆ. == ಅನುವಾದ ಹಾಗೂ ರೂಪಾಂತರ == ಮುಸ್ಸಂಜೆಯ ಕಥಾ ಪ್ರಸಂಗ ಕಾದಂಬರಿ ಆಧಾರಿತವಾಗಿ ಕವಿತಾ ಲಂಕೇಶ್‌ ಅವರ ನಿರ್ದೇಶನದಲ್ಲಿ "ಅವ್ವ" ಎಂಬ ಕನ್ನಡ ಚಲನಚಿತ್ರವು ೨೦೦೦೮ ಬಿಡುಗೊಡೆಯಾಯಿತು. ಈ ಚಲನಚಿತ್ರಕ್ಕೆ ಕರ್ನಾಟಕ ರಾಜ್ಯದ ಅತ್ಯುತ್ತಮ ಚಿತ್ರ ಪ್ರಶಸ್ತಿ ಲಭಿಸಿದೆ. ‘ಮುಸ್ಸಂಜೆ ಕಥಾ ಪ್ರಸಂಗ’ವನ್ನು ಅದೇ ಹೆಸರಿನಲ್ಲಿ ಬಸವರಾಜ ಸೂಳೇರಿಪಾಳ್ಯರವರು ರಂಗರೂಪಗೊಳಿಸಿದ್ದು, ಕೆಎಸ್‌ಡಿಎಲ್ ಚಂದ್ರುರವರು ತಮ್ಮ ‘ರೂಪಾಂತರ’ ತಂಡದ ಕಲಾವಿದರಿಗೆ ನಿರ್ದೇಶಿಸಿದ್ದಾರೆ. ಈ ನಾಟಕ ೨೦೦೫ರಲ್ಲಿ ಮೊದಲ ಪ್ರದರ್ಶನ ಕಂಡಿತು. == ಉಲ್ಲೇಖಗಳು ==